ನಿರ್ದೇಶನ: ರಾಜ್ಗುರು
ನಿರ್ಮಾಣ: ಜನಮನ ಸಿನಿಮಾಸ್
(ಗೌರಿಶಂಕರ್, ಜೈ ಶಂಕರ್ ಪಟೇಲ್ )
ಸಂಗೀತ ನಿರ್ದೇಶನ; ಗಗನ್ ಬಡೇರಿಯಾ
ಛಾಯಾಗ್ರಹಣ: ಕೀರ್ತನ್ ಪೂಜಾರಿ
ತಾರಾಗಣ: ಗೌರಿಶಂಕರ್, ಬಿಂದು ಶಿವರಾಂ, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ಸಂಪತ್ ಮೈತ್ರೇಯ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಇತರರು
ಮಲೆನಾಡು ಭಾಗದಲ್ಲಿ ಹಲವಾರು ಸಂಸ್ಕೃತಿಗಳಿವೆ, ಅದರಲ್ಲಿ ಕೆರೆಬೇಟೆಯೂ ಒಂದು. ಕೆರೆಗಳಲ್ಲಿ ಮೀನು ಬೇಟೆಯಾಡುವ ಕೆರೆಬೇಟೆ ಎನ್ನುತ್ತಾರೆ. ಇದು ಅಲ್ಲಿನ ಜನರ ಸಾಂಪ್ರದಾಯಿಕ ಮನರಂಜನಾ ಕಾರ್ಯಕ್ರಮವೂ ಹೌದು. ಇದರ ಹಿನ್ನೆಲೆಯಲ್ಲಿ ನಡೆಯುವ ಒಂದು ದುರಂತ ಪ್ರೇಮಕಥೆಯನ್ನು ನಿರ್ದೇಶಕ ರಾಜ್ಗುರು ಅವರಿಲ್ಲಿ ಕಟ್ಟಿಕೊಟ್ಟಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರ ಇದಾಗಿದೆ.
ತಾಯಿಯ ಆಸರೆಯಲ್ಲಿ ಬೆಳೆದ ನಾಗ ಅಲಿಯಾಸ್ ನಾಗರಾಜ (ಗೌರಿಶಂಕರ್) ಯಾರಿಗೂ ಹೆದರದ, ತಲೆಬಾಗದ ವ್ಯಕ್ತಿತ್ವ ಉಳ್ಳವನು.
ಆತನ ಬಗ್ಗೆ ಊರಲ್ಲಿ ಕೆಲವರಿಗೆ ಅಸಹನೆಯೂ ಇರುತ್ತದೆ. ಕೇವಲ ರೋಷ, ಆವೇಶ ತುಂಬಿಕೊಂಡಿದ್ದ ನಾಗನ ಬದುಕಿನಲ್ಲಿ ಮೀನಾ(ಬಿಂದು ಶಿವರಾಂ)ಳ ಪ್ರವೇಶವಾಗಿ ಇಬ್ಬರ ನಡುವೆ ಪ್ರೀತಿ ಚಿಗುರುತ್ತದೆ. ತನ್ನ ತಾಯಿಗಾಗಿ ಒಂದು ಸ್ವಂತ ಜಾಗ ಖರೀದಿಸಲು ನಾಗ ಪ್ರಯತ್ನಿಸುತ್ತಾನೆ. ಇವರ ಪ್ರೀತಿಯ ಮೀನಾ ಮನೆಯವರಿಗೆ ತಿಳಿಯುತ್ತದೆ. ಮೀನಾಳ ತಂದೆ ನಾಗನನ್ನು ಹಾಗೂ ಆತನ ತಾಯಿ ಕೆಳಜಾತಿಯವಳೆಂದು ಕೆಟ್ಟದಾಗಿ ನಿಂದಿಸುತ್ತಾನೆ. ಇದಾದ ನಂತರ ಇದ್ದಕ್ಕಿದ್ದ ಹಾಗೆ ಮೀನಾ ಕಾಣೆಯಾಗುತ್ತಾಳೆ. ಎಂಟು ತಿಂಗಳ ನಂತರ ಗರ್ಭಿಣಿಯಾಗಿ ಮತ್ತೆ ಪ್ರತ್ಯಕ್ಷವಾಗುತ್ತಾಳೆ. ಆದರೆ ನಾಗನ ಸುಳಿವೇ ಇರುವುದಿಲ್ಲ. ಮುಂದೇನಾಗುತ್ತದೆ, ನಾಗ ಎಲ್ಲಿ ಹೋದ? ಮೀನಾ ಏನಾಗುತ್ತಾಳೆ, ಜಾತಿ, ಬಡತನ ಸಿರಿತನದ ನೆಪದಲ್ಲಿ ಹಿರಿಯರು ಮಾಡುವ ತಪ್ಪೇನು ಇದನ್ನೆಲ್ಲ ಕೆರೆಬೇಟೆ ಚಿತ್ರದಲ್ಲಿ ವೀಕ್ಷಕರ ಮನಮುಟ್ಟುವ, ಹೃದಯ ಮಿಡಿಯುವ ಕಥೆಯೊಂದಿಗೆ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೊಗಡನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲಾಗಿದೆ. ಅಚ್ಚರಿಯ ಕ್ಲೈಮ್ಯಾಕ್ಸ್ ಈ ಚಿತ್ರದ ಹೈಲೈಟ್ ಅನ್ನಬಹುದು. ನಿರ್ದೇಶಕರು ಇದರ ಮೂಲಕ ಚಿತ್ರವನ್ನು ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ಗೌರಿಶಂಕರ್ ಈ ಚಿತ್ರದಕ್ಕಿ ಹಿಂದಿಗಿಂತ ಹೆಚ್ಚು ಮಾಗಿದ ಅಭಿನಯ ನೀಡಿದ್ದಾರೆ. ಅವರೂ ಮಲೆನಾಡ ಭಾಗದವರೇ ಆಗಿರುವುದರಿಂದ ಸಂಭಾಷಣೆ ಸಹಜವಾಗಿ ಮೂಡಿಬಂದಿದೆ. ಇನ್ನು ಮೊದಲ ಸಿನಿಮಾದಲ್ಲೇ ನಾಯಕಿ ಬಿಂದು ಶಿವರಾಂ ಗಮನ ಸೆಳೆಯುತ್ತಾರೆ. ನಾಯಕಿ ತಂದೆ ಪಾತ್ರ ಮಾಡಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸಂಪತ್ ಮೈರ್ತೇಯಾ, ತಾಯಿ ಪಾತ್ರದಲ್ಲಿ ಹರಿಣಿ ಇವರೆಲ್ಲ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಗಗನ್ ಬಡೇರಿಯಾ ಅವರ ಹಿನ್ನೆಲೆ ಸಂಗೀತ ಮತ್ತು ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಸಿನಿಮಾದ ಪ್ಲಸ್ ಪಾಯಿಂಟ್. ಮಲೆನಾಡ ಪರಿಸರವನ್ನು ಕಟ್ಟಿಕೊಡುವ ಹಾಡುಗಳು ಸಹ ಗಮನ ಸೆಳೆಯುತ್ತದೆ.